Wednesday 4 January 2012

ಬರಹಗಾರರ ಸಮ್ಮೇಳನ 


ಮೊನ್ನೆ ಹೊಸವರ್ಷದ ಮೊದಲ ದಿನ ಕುಂದಾಪುರದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬರಹಗಾರರ ಸಮ್ಮೇಳನ ಜರುಗಿತು.  ಅದೇ ದಿನ ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿತ್ತು.  ಉದ್ಘಾಟನೆ ಮಾಡಿದ ಬಳಿಕ ನಾನು ಮಾಧ್ಯಮ ಸಾಹಿತ್ಯದ ಬಗ್ಗೆ ಮಾತಾಡಿದೆ. ಕೇವಲ ಇನ್ನೂರು ವರ್ಷಗಳ ಇತಿಹಾಸವಿರುವ ಮುದ್ರಣ ಮಾಧ್ಯಮ ಈ ಎಲೆಕ್ಟ್ರೋನಿಕ್ ಯುಗದಲ್ಲಿ ಬದಲಾವಣೆಯ ಸಂಧಿ ಘಟ್ಟದಲ್ಲಿದೆಯೆಂದು ನಾನು ಪ್ರತಿಪಾದಿಸಿದೆ. ಚಿತ್ರದಲ್ಲಿ ಸಾಹಿತಿ  ಕೆ .ವಿ.ಕೃಷ್ಣಯ್ಯ, ಲೇಖಕ ಎನ್.ಜಿ.ಪಟವರ್ಧನ್, ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎಲ್.ಸಾಮಗ ಮತ್ತು 'ಕುಂದಪ್ರಭ' ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ಅವರನ್ನು ಕಾಣಬಹುದು.

Monday 2 January 2012

ಕವನ ಸಂಕಲನಗಳ ಬಿಡುಗಡೆ



ಮಂಗಳೂರು ತಾಲೂಕು ಚುಟಕ ಸಾಹಿತ್ಯ ಪರಿಷತ್ ವತಿಯಿಂದ ನಿನ್ನೆ ನಗರದಲ್ಲಿ ಶೈಲಜಾ ಪುದುಕೋಳಿ ಅವರ "ಕಣಿವೆಯಾಳದ ಕಾವ್ಯ" ಹಾಗೂ ಶಶಿಕಲಾ ಕದ್ರಿಯವರ "ಇಳಿಹೊತ್ತಿನ ಕೈ ತುತ್ತು" ಕವನ ಸಂಕಲನಗಳನ್ನು ಬಿಡುಗಡೆಗೊಳಿಸಿ ಮಾತನಾಡಿದೆ. ಅಧ್ಯಕ್ಷತೆಯನ್ನು ಸುರತ್ಕಲ್ ಗೋವಿಂದದಾಸ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ. ಕೃಷ್ಣಮೂರ್ತಿ ಪಿ. ವಹಿಸಿದ್ದರು. ಭಾವದಿಂದ ಧ್ವನಿ, ಧ್ವನಿಯಿಂದ ಸೂಚ್ಯತೆ, ಸೂಚ್ಯತೆಯಿಂದ ಅರ್ಥವಿಪುಲತೆ- ಆಗ ಮಾತ್ರ ಒಳ್ಳೆಯ ಕಾವ್ಯ ಮೂಡಿಬರುತ್ತದೆ ಎಂಬುದು ನನ್ನ ಮಾತಿನ ಮುಖ್ಯಾಂಶವಾಗಿತ್ತು. ಪುಸ್ತಕ ಬಿಡುಗಡೆಯ ಬಳಿಕ ವಿವಿದ ಕವಿಗಳ ಭಾಗವಹಿಸುವಿಕೆಯಲ್ಲಿ ಕವಿಗೋಷ್ಠಿ ಆಯೋಜಿಸಲಾಗಿತ್ತು.