Saturday 17 December 2011

ಒಂದು ಸಂದರ್ಶನ 

ಪ್ರಸ್ತುತ ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿ ಮತ್ತು ಸಂಸದರಾಗಿ  ಮಂಗಳೂರು ಲೋಕಸಭಾ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದ ಶ್ರೀ ವಿ. ಧನಂಜಯಕುಮಾರ್ ಅವರು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ವೇನೂರಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಮಂಗಳೂರು ಆಕಾಶವಾಣಿಗಾಗಿ ಅವರನ್ನು ಸಂದರ್ಶಿಸಿದೆ. ಪಕ್ಕದಲ್ಲಿ ನನ್ನ ಸಹೋದ್ಯೋಗಿ ಕೆ.ಅಶೋಕ್ ಧ್ವನಿಮುದ್ರಿಸುತ್ತಿದ್ದಾರೆ.

Monday 12 December 2011

ಗಂಗಾವತಿಯಲ್ಲಿ ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ 

"ರಾಜ ಎಲ್ಲ ಗೆದ್ದ ಗಜದಂತೆ ಸಿಂಹಾಸನದ ಬಳಿಗೆ ಬಂದ..."
ಅಖಿಲ ಭಾರತ ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೊನ್ನೆ ದಿನಾಂಕ ೯,೧೦ ಹಾಗೂ ೧೧ ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್ ಅವರ ಅಧ್ಯಕ್ಷತೆಯಲ್ಲಿ  ಜರುಗಿತು.  ೧೧ ರಂದು ಬೆಳಗ್ಗೆ ೯.೩೦ ಕ್ಕೆ ಪ್ರಧಾನ ಕವಿಗೋಷ್ಠಿ ಏರ್ಪಾಟಾಗಿತ್ತು. ಕವಿಗೋಷ್ಠಿಯಲ್ಲಿ ಭಾಗವಹಿಸಲು ನಾನು ಆಹ್ವಾನಿತನಾಗಿದ್ದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಡಾ. ಬುದ್ದಣ್ಣ  ಹಿಂಗಮಿರೆ ವಹಿಸಿದ್ದರು. ನಾನು ನನ್ನ "ಭೋಜರಾಜನ ಸಿಂಹಾಸನ" ಎಂಬ ಕವಿತೆ ಓದಿದೆ. ಪ್ರೇಕ್ಷಕರಿಗೆ ಅದು ತಲಪಿತು ಎಂಬುದು ಕರತಾಡನದಿಂದ ತಿಳಿಯಿತು. ಕವಿತೆ ಓದುತ್ತಿರುವ ಎರಡು ದೃಶ್ಯಗಳನ್ನು ನನ್ನ ಬ್ಲಾಗ್ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇನೆ.

"ರಾಜ ಒಂದೇ ಒಂದು ಹೆಜ್ಜೆ ಸಿಂಹಾಸನದತ್ತ ಎತ್ತಿಡಬೇಕು... ಅಷ್ಟರಲ್ಲಿ ಶತ್ರುಗಳು ದಾಳಿಯಿಟ್ಟ ಸುದ್ದಿ ಬಂತು!"

Friday 9 December 2011

ನನ್ನ ಬ್ಲಾಗ್ ಓದುಗರಿಗಾಗಿ ಇವತ್ತು ಒಂದು ಕವನ ಕೊಡ್ತಾ ಇದೇನೆ. ಕೆತ್ತುವುದರಲ್ಲೇ ತಲ್ಲೀನನಾದ ನನ್ನ ಕುರಿತು ಶಿಲೆ ನನ್ನನ್ನೇ ಮಾತಾಡಿಸಿತು. 

                                                            ಕೆತ್ತಲು ಹೋದೆ 

ಕೆತ್ತಲು ಹೋದೆ 
ಕೆತ್ತುತ್ತ ಕೆತ್ತುತ್ತ ಕೆತ್ತುತ್ತಲೇ ಕುಳಿತೆ 
ಮೊದಲು ತಲೆ 
ಆಮೇಲೆ ಕಣ್ಣು ಮೂಗು ಕಿವಿ ಬಾಯಿ 
ಕುತ್ತಿಗೆ 
ಭುಜ ಹೊಟ್ಟೆ ಹೊಕ್ಕುಳ 
ತೊಡೆ ಕಾಲು 
ಕೊನೆಗೆ ಪಾದ 
ತಲೆಯೆತ್ತಿ ನಿಲ್ಲಬೇಕು 
ಅದಕ್ಕೆ ಬೆಂಬಲಕ್ಕಾಗಿ ಬೆನ್ನು 
ಹೀಗೆ ಮಾಡುತ್ತಾ ಮಾಡುತ್ತಾ ಇರುವಾಗ 

ಮೂರ್ತಿ ಕೇಳಿತು:
ನೀನೇನು ಮಾಡುತ್ತಿರುವೆ?
ನಾನು ಒಂದು ಕ್ಷಣ ಸ್ತಬ್ಧ 
ಅಪ್ಪನನ್ನೇ ಮಗು ಕೇಳಿದಂತೆ ಪ್ರಶ್ನೆ 
ಮೂರ್ತಿ ಹೇಳಿತು- 
ನೀನು ಮಾಡುತ್ತಿಲ್ಲ ನನ್ನ 
ನಾನು ಮೊದಲು ಇದ್ದೆ 
ಈಗಲೂ ಇದ್ದೇನೆ 
ನಾಳೆಯೂ ಇರುತ್ತೇನೆ 
ನೀನು ಮಾಡುತ್ತಿರುವೆ ನಿನ್ನನ್ನೆ
ಎಚ್ಚರ,
ಒಂದೊಂದು ಪೆಟ್ಟನ್ನು ಜಾಗ್ರತೆಯಿಂದ ಹಾಕು!

Sunday 4 December 2011

ಸೀಮಾ ಸುಂಕ ಇಲಾಖೆಯ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ



ಮಂಗಳೂರಿನ ಪಣಂಬೂರಿನಲ್ಲಿರುವ ಸೀಮಾ ಸುಂಕ (ಕಸ್ಟಮ್ಸ್) ಕಛೇರಿಯಲ್ಲಿ ನವೆಂಬರ‍್ ದಿನಾಂಕ ೩೦ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಆಯುಕ್ತರಾದ ವಿ.ಎಸ್.ಎನ್.ಚೌಧರಿ ಅಧ್ಯಕ್ಷತೆ ವಹಿಸಿದ್ದರು. ನಾನು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕನ್ನಡ ಭಾಷೆಯ ಚರಿತ್ರೆ ಮತ್ತು ಅದರ ಇವತ್ತಿನ ಸ್ಥಿತಿಗತಿಯ ಬಗ್ಗೆ ಮಾತನಾಡಿದೆ. ಕನ್ನಡಿಗರು ಸಾರ್ವಜನಿಕ ಸಭೆಸಮಾರಂಭಗಳಲ್ಲಿ ಮಾತಾಡುವಾಗ ನಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತಾಡುತ್ತಾರೆ ಅಲ್ಲದೆ ಇತರ ಭಾಷಿಕರೊಂದಿಗೆ ಹೋಲಿಸಿ ನಮ್ಮ ದೌರ್ಬಲ್ಯಗಳನ್ನು ಎತ್ತಿ ಆಡುತ್ತಾರೆ. ಇದರಿಂದ ಕನ್ನಡಿಗರ ನೈತಿಕತೆ ಕುಂದುವುದಲ್ಲದೆ ಇತರ ಭಾಷಿಕರ ಮುಂದೆ ಹಾಸ್ಯಾಸ್ಪದವಾಗಬೇಕಾಗುತ್ತದೆ. ಈ ಪರಿಸ್ಥಿತಿ ತಪ್ಪಬೇಕು, ನಾವು ನಮ್ಮ ಶಕ್ತಿ ಸಾಮರ್ಥ್ಯಗಳನ್ನು ಎತ್ತಿ ಆಡುವಂತಾಗಬೇಕು ಎಂದು ನಾನು ಉಪನ್ಯಾಸದಲ್ಲಿ ಹೇಳಿದೆ.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವಿತ್ತು. ಶ್ರೀ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಶ್ರೀ ಮಹೇಶ ಭಟ್ ಕಾರ್ಯಕ್ರಮ ನಿರೂಪಿಸಿದರು. ಮನೋರಂಜನಾ ಸಂಘದ ಕಾರ್ಯದರ್ಶಿ ಎಚ್.ಎನ್. ರವಿಶಂಕರ್ ವಂದನಾರ್ಪಣೆಗೈದರು. 
ಉಡುಪಿಯಲ್ಲಿ ಮಕ್ಕಳ ಗಮಕ ಸಮ್ಮೇಳನ

ಮೊನ್ನೆ ನವಂಬರ‍್ ದಿನಾಂಕ ೨೬ ಹಾಗು ೨೭ರಂದು ಉಡುಪಿಯ ರಾಜಾಂಗಣದಲ್ಲಿ ಅಖಿಲ ಕರ್ನಾಟಕ ಎರಡನೆಯ ಮಕ್ಕಳ ಗಮಕ ಸಮ್ಮೇಳನ ಜರುಗಿತು. ಸಮಾರೋಪ ಸಮಾರಂಭಕ್ಕೆ ನನ್ನನ್ನು ಮುಖ್ಯಅತಿಥಿಯಾಗಿ ಆಹ್ವಾನಿಸಿದ್ದರು. ಸಮಾರಂಭದ ಮೂರು ದೃಶ್ಯಗಳನ್ನು ಕಾಣಬಹುದು...

ಕರ್ನಾಟಕ ಗಮಕಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ.ಆರ‍್. ಸತ್ಯನಾರಾಯಣ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ  ಅಧ್ಯ ಕ್ಷರಾದ
ಶ್ರೀ ಪ್ರದೀಪ್ ಕುಮಾರ‍್ ಕಲ್ಕೂರ ಸ್ಮರಣಿಕೆಯನ್ನು ನೀಡುತ್ತಿದ್ದಾರೆ.