Sunday 3 July 2011

ಸಂದರ್ಶನ

                           ನೃತ್ಯಗುರುಗಳೊಂದಿಗೆ ಅರ್ಧ ದಿನ 

ಮಾಸ್ಟರ್ ವಿಠಲ್ ಕರಾವಳಿ ಕರ್ನಾಟಕದ ಹಿರಿಯ ನೃತ್ಯಗುರುಗಳಲ್ಲಿ ಒಬ್ಬರು. ೮೪ ವರ್ಷ ವಯಸ್ಸಿನ ಅವರು ಈಗ ರಂಗದಿಂದ ಹಿಂದೆ ಸರಿದಿದ್ದರೂ, ಭರತನಾಟ್ಯವೆಂದರೆ ಇವತ್ತಿಗೂ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಭರತನಾಟ್ಯದ ಶಾಸ್ತ್ರೀಯತೆ ಮತ್ತು ಪ್ರದರ್ಶನದ ವಿಚಾರ ಬಂದಾಗ ಉದಾಹರಣೆ ಮತ್ತು ಪ್ರಾತ್ಯಕ್ಷಿಕೆ ಸಹಿತ ವಿವರಿಸುತ್ತಾರೆ. ಶುದ್ಧ ಶಾಸ್ತ್ರೀಯವಾದ ಈ ಕಲೆ ಅದರ ಸಂವಿಧಾನದಲ್ಲೇ ಇರಬೇಕು, ಆದರೆ ಕಾಲಿಕವಾದ ಕೆಲವು ಪ್ರಭಾವಗಳು ತಲೆದೋರಿದರೆ ಅದರಿಂದ ತಪ್ಪೇನೂ ಇಲ್ಲ ಎನ್ನುತ್ತಾರೆ.  ಬಹುಶ: ಅವರ ಮಾತಿನಲ್ಲಿ ಇದನ್ನು 'ಶೈಲಿ' ಎಂದು ಕರೆಯಬಹುದು.    

ಅರ್ಥಾ ಪೆರ್ಲ, ಮಾಸ್ಟರ್ ವಿಠಲ್ ಮತ್ತು ಈ ಬ್ಲಾಗಿಗ 

ಕರ್ನಾಟಕ ಕಲಾಶ್ರೀ, ನಾಟ್ಯ ಚಕ್ರವರ್ತಿ, ನಾಟ್ಯ ಕಲಾನಿಧಿ, ನಾಟ್ಯ ಕಲಾವಿಶಾರದ, ನಾಟ್ಯ ಕಲಾಸಿಂಧು, ನಾಟ್ಯಕೌಸ್ತುಭ ಮೊದಲಾದ ಪ್ರಶಸ್ತಿ-ಬಿರುದುಗಳು ಅವರಿಗೆ ಸಂದಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಭರತನೃತ್ಯ ಕಲಿಸಿ ಸಾರ್ಥಕತೆ ಅನುಭವಿಸಿದ್ದಾರೆ ('ಭರತ' ಎಂಬ ಶಬ್ದವು  ಭಾವ, ರಾಗ, ತಾಳ ಎಂಬ ಮೂರು ಶಬ್ದಗಳಿಂದ ವ್ಯುತ್ಪನ್ನಗೊಂಡಿದೆ ಎನ್ನುತ್ತಾರೆ ಅವರು).  ಚಲನಚಿತ್ರ ಅಭಿನೇತ್ರಿ ದಿ.ಕಲ್ಪನಾ, ಮೂಡಬಿದ್ರೆಯ ಡಾ. ಎಂ.ಮೋಹನ ಆಳ್ವ ಮೊದಲಾದವರು ವಿಠಲ್  ಅವರ ಶಿಷ್ಯರಲ್ಲಿ ಕೆಲವರು. ನೃತ್ಯರೂಪಕಗಳ ರಚನೆ ಮತ್ತು ಪ್ರದರ್ಶನಗಳಿಗಾಗಿ ಹೆಸರಾಗಿರುವ ಅವರು ೧೯೮೧ರಲ್ಲಿ ಸ್ವೀಡನ್ ದೇಶಕ್ಕೆ ಹೋಗಿ ಸುಮಾರು ಮೂರು ತಿಂಗಳ ಕಾಲ ಅಲ್ಲಿ ಹಲವಾರು ಪ್ರದರ್ಶನಗಳನ್ನು ನೀಡಿ ದೇಶಕ್ಕೆ ಕೀರ್ತಿ ತಂದರು. 

ಮಾಸ್ಟರ್ ವಿಠಲ್ ಅವರನ್ನು ಸಂದರ್ಶಿಸುತ್ತಿರುವ ಅರ್ಥಾ ಪೆರ್ಲ 

ಇವತ್ತು ನನ್ನ ಮಗಳು ಅರ್ಥಾಳೊಂದಿಗೆ ಮಂಗಳೂರಿನ ಕಾವೂರಿನಲ್ಲಿರುವ ವಿಠಲ್ ಅವರ ಮನೆಗೆ ಹೋಗಿದ್ದೆ. ಮಗಳು ಪತ್ರಿಕೆಯೊಂದಕ್ಕೆ ಅವರ ಸಂದರ್ಶನ ನಡೆಸಬೇಕಾಗಿತ್ತು. ಅವಳು ಭರತನಾಟ್ಯದಲ್ಲಿ ವಿದ್ವತ್ ಮಾಡುತ್ತಿದ್ದಾಳೆ (ಬೇರೆ ಗುರುಗಳ ಬಳಿ).  ಇಬ್ಬರೂ ಭರತನಾಟ್ಯದ ಕುರಿತು ಮಾತಾಡುವಾಗ ನನಗೇನು ಕೆಲಸ? ಸುಮ್ಮನೆ ಕುಳಿತು ಕೇಳುತ್ತಿದ್ದೆ.  ಸುಮಾರು ಎರಡು ಗಂಟೆ ಹೊತ್ತು ವಿಠಲ್ ಅವರು ಶಾಸ್ತ್ರೀಯ ನೃತ್ಯದ ಆಳ ಅಗಲಗಳ ಕುರಿತು  ಮಾತಾಡುವಾಗ ನೃತ್ಯಲೋಕಕ್ಕೆ ಹೋದ ಅನುಭವ ಆಯಿತು.
   
 (ಚಿತ್ರಗಳು: ಕೆ.ಎಸ್.ವೇಣುವಿನೋದ).

1 comment:

  1. ಬಹಳ ವರ್ಷಗಳ ಹಿಂದೆ ಅವರನ್ನು ಕಂಡಿದ್ದೆ, ಈಗ ನಿಮ್ಮ ಬರೆಹ ಓದಿ ಅನೇಕ ನೆನಪುಗಳು ಮರುಕಳಿಸಿದವು, ಅವರು ಬಹಳ ದೊಡ್ಡ ಸಾಧಕರು, ನೆನಪಿಸಿದ್ದಕ್ಕೆ ವಂದನೆಗಳು, ಮತ್ತೆ ಹೇಗಿದ್ದೀರಿ ಪೆರ್ಲ?

    ReplyDelete