Tuesday 7 June 2011

ಚಿಂತನ 


ನಮ್ಮ  ಈ ನಾಗರಿಕತೆ  ಇನ್ನೆಷ್ಟು ವರ್ಷ ?

ಪೆಟ್ರೋಲ್ ಹಾಗೂ ಇತರೇ ಇಂಧನಗಳ ಬೆಲೆ ಸತತವಾಗಿ ಏರುತ್ತಿರುವುದನ್ನು  ನೋಡಿದರೆ ಅವುಗಳ ಲಭ್ಯತೆ  ಹಾಗು ದಾಸ್ತಾನು ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು ತೋರುತ್ತದೆ.  ಓಡಾಟ ಮತ್ತು ಸಾಗಾಟಕ್ಕಾಗಿ ಅವುಗಳನ್ನೇ ಅವಲಂಬಿಸಿರುವ   ನಮ್ಮ ಈ ಆಧುನಿಕ ನಾಗರಿಕತೆ ಅವುಗಳು ಸಿಗದೇ ಹೋದಾಗ, ಇನ್ನು ಐವತ್ತು - ಅರವತ್ತು ವರ್ಷಗಳಲ್ಲಿ ದುರ್ಬಲವಾಗುತ್ತ ಆಗುತ್ತಾ  ಕುಸಿದು ಬೀಳಬಹುದು  ಅನ್ನಿಸುತ್ತದೆ. ಅಷ್ಟುಹೊತ್ತಿಗೆ ಭೂಮಿಯ ಆಳದಿಂದ ದೊರೆಯುವ ಇಂಧನ ಖಾಲಿಯಾಗುವುದಲ್ಲದೆ, ನಮ್ಮ ವಾಹನಗಳನ್ನು  ಮನೆ ಮುಂದೆ  ಅಲಂಕಾರ ವಸ್ತುವಿನಂತೆ  ಇಡುವ ದಿನ ಬರಬಹುದು.

ಜೈವಿಕ  ಇಂಧನ, ಸೌರಶಾಖ  ಇತ್ಯಾದಿ ಪರ್ಯಾಯ ಶಕ್ತಿ ಮೂಲಗಳು  ಈಗಿರುವ ವಾಹನಗಳಿಗೆ ಆಗುವುದಿಲ್ಲ ಅಲ್ಲದೆ ಅವುಗಳ ಲಭ್ಯತೆ  ತೀರಾ ಕಡಿಮೆ. ಅವುಗಳನ್ನು ಬಳಸಿದರೆ ವಾಹನಗಳಿಗೆ ಸಿಗುವ ವೇಗ ಕಡಿಮೆ. ಅಧಿಕ ಭಾರವನ್ನು ಎಳೆಯಲು ಅವುಗಳಿಂದ ಸಾಧ್ಯವಿಲ್ಲ. 

ಒಂದು ಕಡೆಯಿಂದ  ಇನ್ನೊಂದು ಕಡೆಗೆ ಜನರಿಗೆ ಹೋಗಲಾಗದಿದ್ದರೆ ಮತ್ತು ಸಾಮಾನು ಸರಂಜಾಮುಗಳ  ಸಾಗಾಟ ಸಾಧ್ಯವಾಗದಿದ್ದರೆ  ನಮ್ಮ ಈ ನಾಗರಿಕತೆ  ಉಳಿಯುವುದಾದರೂ  ಹೇಗೆ ?

ನಗರಗಳ ಧಾರಣಶಕ್ತಿ  ವರ್ಷದಿಂದ  ವರ್ಷಕ್ಕೆ ಕುಸಿಯುತ್ತಿರುವ  ಇನ್ನೊಂದು ತೊಂದರೆಯೂ ಇದೆ. ಉದ್ಯೋಗಾವಕಾಶ, ವಲಸೆ ಇತ್ಯಾದಿ ಕಾರಣಗಳಿಂದ  ನಗರಗಳು ಅಗಾಧವಾಗಿ  ಬೆಳೆಯುತ್ತಿವೆ  ಮತ್ತು  ಮೂಲ ಸೌಕರ್ಯಗಳಿಂದ ವಂಚಿತವಾಗುತ್ತಿವೆ. ಹಳ್ಳಿಗಳು  ಮತ್ತು ಕೃಷಿ ನಿರ್ಲಕ್ಷಿತವಾಗುತ್ತಿದೆ . ಇದರಿಂದಾಗಿ ನಮ್ಮ ಈಗಿನ  ಒಟ್ಟು ವ್ಯವಸ್ಥೆಯೇ  ಕುಸಿದು ಬೀಳಬಹುದು . 

ಯಾವುದೇ ನಾಗರಿಕತೆಗೆ ಒಂದು ಆಯುಸ್ಸು  ಎಂಬುದು ಇರುತ್ತದೆ. ವಿಕಾಸವು ಅದರ ಒಡಲಲ್ಲೇ  ನಾಶದ ಬೀಜವನ್ನೂ  ಅಡಗಿಸಿಕೊಂಡಿರುತ್ತದೆ. ಜಗತ್ತಿನಲ್ಲಿ ಈ ಹಿಂದೆ  ಆಗಿ ಹೋದ ಗ್ರೀಕ್ ನಾಗರಿಕತೆ, ಈಜಿಪ್ಟ್  ನಾಗರಿಕತೆ,  ಮೆಸಪೋಟೀಮಿಯ , ಹರಪ್ಪಾ ಮತ್ತು  ಮೊಹೆಂಜೊದಾರೋ ಮೊದಲಾದ ನಾಗರಿಕತೆಗಳೆಲ್ಲ ವಿಕಾಸ ಹೊಂದಿ ಅನಂತರ ಯಾವುದೋ ಕಾರಣಕ್ಕೆ ನಾಶವಾಗಿ ಕಾಲಗರ್ಭದಲ್ಲಿ ಲೀನವಾಗಿ ಹೋದವು. ನಮ್ಮ ಆಧುನಿಕ ಯಂತ್ರ ನಾಗರಿಕತೆ ಈಗ ಅದರ ಉತ್ತುಂಗ ಸ್ಥಿತಿಯಲ್ಲಿದೆ ..ಅದಕ್ಕೆ ಕಾರಣವಾದದ್ದು ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿ. ಇದು ಪರಿಸರ ಸ್ನೇಹಿ ಆಗಿಲ್ಲದೇ ಇರುವುದು ಒಂದು ನಕಾರಾತ್ಮಕ ಅಂಶ. ನಾವು ಈಗ ಭೂಮಿಯ ಶಕ್ತಿ ಮೂಲಗಳನ್ನು ಬಳಸಿ ಬರಿದು ಮಾಡುತ್ತಿದ್ದೇವೆ. ಈಗಿನ ನಾಗರಿಕತೆಗೆ ಈ ಅತಿವೇಗ ಸಾಧ್ಯವಾದದ್ದು ಇಂಧನ ಶೋಧವಾದ ಬಳಿಕ, ಅಂದರೆ    ಕಳೆದ  ಸುಮಾರು ಇನ್ನೂರು ವರ್ಷಗಳಿಂದ ತಾನೇ ? ಇಷ್ಟು ಬೇಗ ಸಂಪನ್ಮೂಲಗಳನ್ನು ತಿಂದು ಮುಗಿಸಿರುವ ನಾವು,  ನಾಳೆಗೆ ಅದನ್ನು ಉಳಿಸಿ ನಮ್ಮ ನಂತರದ ತಲೆಮಾರಿಗೆ ಕೊಡುತ್ತೇವೆ ಎಂಬ ವಿಶ್ವಾಸ ನನಗಂತೂ ಇಲ್ಲ! 

ಇನ್ನು ಎರಡು ತಲೆಮಾರುಗಳಲ್ಲಿ (ಅಂದರೆ ಸುಮಾರು ಐವತ್ತು - ಅರವತ್ತು ವರ್ಷ ) ಈ ನಾಗರಿಕತೆ ತನ್ನ ಧಾರಣ ಶಕ್ತಿಯನ್ನು   ಪೂರ್ತಿಯಾಗಿ ಕಳೆದುಕೊಂಡು  ಅವಸಾನ ಹೊಂದಬಹುದು ಎಂಬುದು ನನ್ನ ಅನಿಸಿಕೆ.
ಈ ಊಹೆಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ .ಕೆಲವು ಕೋನಗಳಿಂದ ನನ್ನಷ್ಟಕ್ಕೆ  ಮಾಡಿಕೊಂಡಿರುವ ಊಹೆ. ನಮ್ಮ ಆಧುನಿಕ ನಾಗರಿಕತೆ ನಿಂತಿರುವುದು 'ಶಕ್ತಿ' (ಇಂಧನ,ವಿದ್ಯುತ್ತ್ ಶಕ್ತಿ ಇತ್ಯಾದಿ )ಯ ಅಸ್ತಿವಾರದ ಮೇಲೆ.  ಶಕ್ತಿ ಮೂಲಗಳನ್ನು ನಾವು ಬರಿದು ಮಾಡುತ್ತಾ ಬಂದಿದ್ದೇವೆ.ಇದಕ್ಕೆ ಪರ್ಯಾಯವಾದ ಬೇರೆ ಹಾದಿಗಳು ಕ್ಷೀಣವಾಗಿವೆ. ಇನ್ನೊಂದೆಡೆಯಿಂದ ಜನಸಂಖ್ಯೆಯು  ವಿಪರೀತವಾಗಿ ಏರುತ್ತ ಮೂಲಭೂತ ಸೌಕರ್ಯಗಳಿಗೂ  ಕೊರತೆಯಾಗಲಿದೆ. ಬೇಸಿಗೆಯಲ್ಲಿ ಕೃಷಿಗೆ ಬಿಡಿ, ಕುಡಿಯಲೂ ಶುದ್ಧ ನೀರಿನ ಅಭಾವ ಕಾಣಿಸಲಾರಂಭಿಸಿದೆ.  

ನಮ್ಮ ಈ ಆಧುನಿಕ  ವ್ಯವಸ್ಥೆ  ಪೂರ್ತಿಯಾಗಿ ಕುಸಿದು ಬಿದ್ದ ಬಳಿಕ ಪ್ರಾಕ್ತನ ಬುಡಕಟ್ಟು ಜನಾಂಗದ ಬದುಕನ್ನು ನಮ್ಮ ಮುಂದಿನ ತಲೆಮಾರಿನವರು  ಬಾಳಬೇಕಾದೀತೇ? ಮತ್ತೆ ಹಳ್ಳಿಗಳಿಗೆ ಹಿಂದಿರುಗಿ ಎತ್ತುಗಳನ್ನು ಬಳಸಿ ಕೃಷಿ ಮಾಡಬೇಕಾದೀತೇ? ನಮ್ಮ ಮೊಮ್ಮಕ್ಕಳ ನಂತರದ  ಕಾಲಕ್ಕೆ ಪರಿಸ್ಥಿತಿ ಪೂರ್ತಿಯಾಗಿ ಬದಲಾಗಿ ಹೋಗಬಹುದೆಂದು ತೋರುತ್ತದೆ, ಅಥವಾ ಈ ನಾಗರಿಕತೆ  ಸಂಪೂರ್ಣವಾಗಿ  ನೆಲಕಚ್ಚಿ ಹೋಗಲೂಬಹುದು. 

No comments:

Post a Comment