Thursday 9 June 2011

ಚಿಂತನ 


'ಓದಿ!, ಕೆಲಸ ಮಾಡಬೇಡಿ!'

ಇತ್ತೀಚೆಗೆ ಸ್ನೇಹಿತರೊಬ್ಬರು ಮಾತಾಡುತ್ತಿದ್ದಾಗ, ಮಾತು ಇವತ್ತಿನ ಶಿಕ್ಷಣಕ್ರಮದ ಕಡೆಗೆ ಹರಿಯಿತು. ಅವರು ಹೇಳಿದರು: "ಹಿಂದಿನ ಕಾಲದಲ್ಲಿ ಶಿಕ್ಷಣದ ಜೊತೆಜೊತೆಗೆ ವೃತ್ತಿ  ತರಬೇತಿಯೂ  ಇರುತ್ತಿತ್ತು, ಜೀವನಕ್ಕೆ ಬೇಕಾಗುವ ವಿವಿಧ ವೃತ್ತಿಗಳನ್ನು ಕಲಿಯುವ ಅವಕಾಶ ಆಗ ಇತ್ತು, ಇವತ್ತಿನ ವಿದ್ಯಾರ್ಥಿಗಳಿಗೆ ಬದುಕಿಗೆ ಅನಿವಾರ್ಯವಾದ ವೃತ್ತಿಗಳ ಬಗ್ಗೆ ಮಾಹಿತಿ-ತಿಳಿವಳಿಕೆ ಇರುವುದಿಲ್ಲ, ಮಕ್ಕಳನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗುತ್ತದೆ, ಅಂದರೆ ವೃತ್ತಿ ಕಲಿಕೆಯಿಂದ ಸರಕಾರವೇ ಅವರನ್ನು ದೂರ ಇಟ್ಟಂತೆ ಆಗಿದೆ " ಎಂದು. 

ಅವರು ಹೇಳಿದ ಮಾತಿನಲ್ಲಿ ಸತ್ಯಾಂಶ ಇಲ್ಲದೆ ಇರಲಿಲ್ಲ. ಮಕ್ಕಳು ಚಿಕ್ಕಂದಿನಲ್ಲೇ ಅಪ್ಪ-ಅಮ್ಮ ಮಾಡುವ ಕೆಲಸಗಳಲ್ಲಿ ತೊಡಗಿಕೊಂಡರೆ ಮಾತ್ರ ಆ ವೃತ್ತಿಯಲ್ಲಿ ನೈಪುಣ್ಯ ಬರುತ್ತದೆ, ಪ್ರೀತಿ ಹುಟ್ಟುತ್ತದೆ. ಪ್ರಾಯಕ್ಕೆ ಬಂದ ಮೇಲೆ, ಅಂದರೆ ಹದಿನೆಂಟು ತುಂಬಿದ ಮೇಲೆ ಅವರಿಗೆ ಅಪ್ಪ-ಅಮ್ಮ ಮಾಡುವ ಕೆಲಸದ ಬಗ್ಗೆ ಪ್ರೀತಿ ಉಳಿಯುವುದಿಲ್ಲ, ಮಕ್ಕಳು ಹೇಳಿದ ಹಾಗೆ ಕೇಳುವುದೂ ಇಲ್ಲ. 

ಇವತ್ತು ಕೃಷಿ ಕೆಲಸಗಳಲ್ಲಿ  ಯಾರೂ ತೊಡಗಿಕೊಳ್ಳದೆ ಇರುವುದಕ್ಕೆ ಇದೂ ಒಂದು ಕಾರಣ. ಚಿಕ್ಕಂದಿನಲ್ಲೇ ತೋಟದಲ್ಲಿ, ಕೆಸರುಗದ್ದೆಯಲ್ಲಿ, ದನದ ಹಟ್ಟಿಯಲ್ಲಿ ಅಪ್ಪ-ಅಮ್ಮನ ಜೊತೆಗೆ ಕೆಲಸ ಮಾಡಿದರೆ ಅವರಿಗೆ  ಆ ಕೆಲಸದ ಬಗ್ಗೆ ಅನುಭವ ಬರುತ್ತದೆ. ನಮ್ಮ ಹಾಗೆ ಅವರು ಮೈ ಕೈಗೆ ಕೆಸರು ಮಾಡಿಕೊಳ್ಳುವುದು ಬೇಡ, ದೊಡ್ಡವರಾದ ಮೇಲೆ ಕಲಿಯಲಿ ಅಂದರೆ, 'ಶಾಲೆಶಿಕ್ಷಣ ಕಲಿತಮೇಲೆ' ಅವರಿಗೆ  ಆ ಕೆಲಸ ಕೀಳು ಅನ್ನಿಸುತ್ತದೆ! ಕೃಷಿ ಕೆಲಸ ಒಂದೇ ಅಲ್ಲ, ತಂದೆ ತಾಯಿಗಳು ಮಾಡುವ ವೃತ್ತಿಯಲ್ಲಿ ಮಕ್ಕಳನ್ನು ಚಿಕ್ಕಂದಿನಲ್ಲೇ ತೊಡಗಿಸಿಕೊಂಡಾಗ ಅವರಿಗೂ ಅನುಭವ ಬರುತ್ತದೆ. 

ಪುಸ್ತಕ ಓದುವ ಅಕ್ಷರಜ್ಞಾನ ಒಂದೇ ಬದುಕಿಗೆ ಬೇಕಾದ ಎಲ್ಲ ಜ್ಞಾನವೂ ಅಲ್ಲ. ದೋಣಿ ನಡೆಸುವುದು, ಬಡಗಿ ಕೆಲಸ, ಕಮ್ಮಾರಿಕೆ, ಚಿನ್ನದ ಕೆಲಸ, ಚಮ್ಮಾರಿಕೆ, ಕುಂಬಾರಿಕೆ, ಗೃಹನಿರ್ಮಾಣ ಮೊದಲಾದವು ವೃತ್ತಿ ಕಲಿಕೆಗಳೇ ಆಗಿವೆ . ಇತ್ತೀಚೆಗೆ ಕೇರಳದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕೆಸರು ಗದ್ದೆ ಮಡಿ ಮಾಡಿ ಬತ್ತ ನಾಟಿ ಮಾಡುವ ಕ್ರಮವನ್ನು ಪ್ರಾತ್ಯಕ್ಷಿಕೆ ಮೂಲಕ ಕಲಿಸಿ ಕೊಡಲಾಯಿತು ಎಂಬ ಪತ್ರಿಕಾ ವರದಿ ಓದಿದೆ. ಇದೇ ರೀತಿ ಬೇರೆ ಬೇರೆ ವೃತ್ತಿಗಳನ್ನು ಶಾಲೆಗಳು ಮತ್ತು ಸಂಘ ಸಂಸ್ಥೆಗಳು ಕಲಿಸಿಕೊಡಬೇಕಾದ ಪರಿಸ್ಥಿತಿ ಇವತ್ತು ಬಂದಿದೆ. ಪಾರಂಪರಿಕ ವಿದ್ಯೆಗಳನ್ನು ಮಕ್ಕಳಿಗೆ ಹೇಳಿ ಕೊಡದೆ, ಆಧುನಿಕ ವಿದ್ಯೆಯ  ಹೆಸರಲ್ಲಿ ಅವರನ್ನು ಕೃಷಿ ಕೆಲಸಗಳಿಂದ ಹಾಗೂ ಇತರೆ ನಾನಾ ವೃತ್ತಿಗಳಿಂದ ದೂರ ಇಟ್ಟು, ಈಗ ತೊಂದರೆಗೆ ಒಳಗಾದೆವು ಎಂದು ಹಳಹಳಿಸಿದರೆ ಏನು ಪ್ರಯೋಜನ?

ತಂದೆ ತಾಯಿಗಳ ಜೊತೆಗೆ ಮಕ್ಕಳು ಅದೇ ವೃತ್ತಿ ಮಾಡಿದಾಗ ಪ್ರಾಯೋಗಿಕ ತರಬೇತಿ ಸಿಗುತ್ತದೆ. ಮುಂದೆ ಅದು ಬದುಕುವ ವಿದ್ಯೆ ಆಗುತ್ತದೆ. ಹಿಂದೆ 'ಗುರುಕುಲ'ಗಳಲ್ಲಿ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಇತರ ಕೆಲಸಗಳನ್ನೂ ಮಾಡಬೇಕಾಗಿತ್ತು. ಇವತ್ತು ನಾವು, ಮಕ್ಕಳು ಕೆಲಸ ಮಾಡಬಾರದು, ಶಿಕ್ಷಣ ಮಾತ್ರ ಕಲಿಯಬೇಕು (ಓದಬೇಕು!)ಎಂಬ ತತ್ತ್ವಕ್ಕೆ ಅಂಟಿ, ನಿಜವಾಗಿ ವೃತ್ತಿ ತರಬೇತಿ ಗಳಿಸುವ ಅವಕಾಶದಿಂದ ಅವರನ್ನು ವಂಚಿತರನ್ನಾಗಿ ಮಾಡುತ್ತಿದ್ದೇವೆ ಅನ್ನಿಸುತ್ತದೆ. 

ಇವತ್ತು ನಾವು ಮಕ್ಕಳಿಗೆ 'ಓದು' ಎನ್ನುತ್ತೇವೆ ಹೊರತು 'ಕೆಲಸ ಮಾಡು' ಎಂದು ಹೇಳುವುದಿಲ್ಲ! ಕೆಲಸ ಮಾಡುವುದು ಪ್ರಾಯೋಗಿಕ ತರಬೇತಿ. ಈ ತರಬೇತಿ ಸಿಗದ, ಕೇವಲ ಓದುವ  'ಅರೆಶಿಕ್ಷಣ' ಮುಂದೊಂದು ದಿನ ನಮಗೆ ಶಾಪವಾಗಿ ಪರಿಣಮಿಸಬಹುದೆಂದು ತೋರುತ್ತದೆ. 'ಬರೇ ಓದಿದ' ಆದರೆ 'ಕೆಲಸ ಮಾಡಲು' ತಿಳಿಯದ ಅಥವಾ 'ಕೆಲಸ ಮಾಡುವುದು ಕೀಳು' ಎಂಬ ಮನೋಭಾವದ ಜನಾಂಗವನ್ನು ನಾವು ಸೃಷ್ಟಿಸುತ್ತಿದ್ದೇವೆಯೇ? ಓದುವುದು ಮನಸ್ಸಿಗೆ ಮತ್ತು ಜ್ಞಾನ ವಿಕಾಸಕ್ಕೆ ಅಗತ್ಯವಾದರೆ ಕೆಲಸ ದೇಹದ ಆರೋಗ್ಯಕ್ಕೆ ತೀರ ಅವಶ್ಯ. ಅದು ವ್ಯಾಯಾಮ ಮಾಡಿದಂತೆಯೂ ಹೌದು. 

'ಕೆಲಸ ಮಾಡದವರ' ದೇಶ ಮುಂದೆ ಬರುವುದು ಹೇಗೆ?!         
     

No comments:

Post a Comment