Friday 10 June 2011

ಕವನ 


 ಒಡ್ಡೋಲಗ
                                                
                                    ಬದ್ಧಭ್ರಕುಟಿಗಳಾಗಿ ತೊಡೆತಟ್ಟಿ ನಿಂತ ಸೈನ್ಯದ ಮಧ್ಯೆ
ಈಗಷ್ಟೇ ಮುಗಿದಿದೆ ಯುದ್ಧ ಕುರುಕ್ಷೇತ್ರದಲ್ಲಿ 
ಮಸೆದ ಕತ್ತಿಗಳೆಲ್ಲ ನೆಲಕಚ್ಚಿ ಬಿದ್ದಿದ್ದಾವೆ ಎಲ್ಲೆಂದರಲ್ಲಿ 
ಹಸಿಹಸೀ ಕೆನ್ನೀರ ಕೆಸರಲದ್ದಿದ ತುಂಡು 
ಕೈಕಾಲುಗಳ ಅರೆಬರೆ ಸೈನ್ಯ, ದೈನೇಸಿ 
ಗೆದ್ದರೂ ಗೆಲವಿರದ ಕಡುರವದ ಹೊರೆ ಹೊತ್ತು 
ನಲುಗಿ ಹಣ್ಣಾಗಿ ಕಿತ್ತಿಟ್ಟು ಕುಸಿವ ವಜ್ಜೆ ಹೆಜ್ಜೆಯ-
ನೂರುತ್ತ ಮುರಿದ ಭರ್ಚಿ ಕಠಾರಿ ಖಡ್ಗ ಈಟಿಗಳನ್ನೆಲ್ಲ
ಗೋರಿ ಹೆಗಲಿಗೇರಿಸಿ ಹೊರಟಿದೆ ಛಲಬಿಡದೆ
ಪಂಚವಿಂಶತಿಯ ತ್ರಿವಿಕ್ರಮ ಸೈನ್ಯ 
ತೆವಳುತ್ತ ಬಸವಳಿಯುತ್ತ ಬಿಸುಸುಯ್ಯುತ್ತ 
ತದೇಕಚಿತ್ತವ ನೆಟ್ಟು ರಾಜಧಾನಿಯತ್ತ     

ಸೈನ್ಯಕ್ಕೆಲ್ಲ ವಿರಮಿಸಲು ಹೇಳಿ
ಅರಮನೆಗೆ ಬಂದಿದ್ದಾನೆ ಮಹಾರಾಜ 
ಮಂಗಲದ್ರವ್ಯದ ಮುತ್ತೈದೆಯರು ಎತ್ತಿದ್ದಾರೆ ಆರತಿ 
ನಗುತ್ತಿದೆ ಸಿಂಹಾಸನ ಮಂದಸ್ಮಿತ ಮಂದಾಸನದಲ್ಲಿ 
ಬಾರಯ್ಯ, ಬಾ! ದೊರೆಯೇ, ತೆಂಕಣಗಾಳಿ 
ಸೋಂಕಿದೊಡಂ ಒಳ್ನುಡಿಗೇಳ್ದೊಡಂ  ನೆನೆವುದೆನ್ನ ಮನಂ 
ಸದಾ ಪೀಠಸ್ಥನನ್! ಎಂದುಲಿಯುತಿದೆ ಗಿಳಿ 
ಮುಖಮಂಟಪದುದ್ದಕ್ಕೂ ಪೀಠಗಳ ಸರತಿ ಸಾಲು 
ಯಾರಿಗೆ ಯಾವ ಮಠ ಪೀಠ ವಾಸ್ತುಸಹಜದ ಕೋಣೆ
ಪೂಜೆ ಮಾಡಿಯೇ ಕೂರಬೇಕು ನಾಳೆ!

ನಾಳೆಯೇ ಒಡ್ಡೋಲಗ, ನೀವೆಲ್ಲ ಬರಬೇಕು 
ಅರಮನೆಯ ಗೋಡೆ ಬಲಪಡಿಸಬೇಕು 
ಗೆದ್ದ ಸೈನಿಕರೆಲ್ಲ ತುಂಬಿಕೊಂಡಿದ್ದಾರಿಲ್ಲಿ
ಅಂತಸ್ತಿಗೆ ತಕ್ಕಂಥ  ಖಾತೆಗಳ ನೀಡಬೇಕು!

ನಾಳೆ ಇನ್ನ್ಯಾವ ಕ್ಯಾತೆಯೋ ಏನೋ 
ಗೆಲುವಿನರಮನೆಗೆ ನೂರು ಹೆಬ್ಬಾಗಿಲು!

ಭಳಿರೆ! ಏನಂತೀರಿ ಭಾಗವತರೆ, ತರಿಸಿ ಉಚಿತಾಸನಗಳ 
ಹಾಕಿಸಿರಿ ಮೊಗಸಾಲೆ ಕೈಸಾಲೆ ಪಡಸಾಲೆಯಲ್ಲಿ 

ಸರಿ, ಮಹಾರಾಜ, ಸೇರಲಿ ಒಡ್ಡೋಲಗ 
ನೋಡೋಣ ಧರ್ಮರಾಯನ ರಾಜ್ಯಭಾರ!               
     

No comments:

Post a Comment