Thursday 21 April 2011

ಆಭರಣ ಸಂಹಿತೆ


ಆಭರಣ ತೊಡಲು ಹಿಂದಿನವರು ಶಾಸ್ತ್ರವನ್ನು ವಿಧಿಸಿದ್ದಾರೆ. ಚಿನ್ನದ ಆಭರಣಗಳನ್ನು ಸೊಂಟದಿಂದ ಮೇಲ್ಭಾಗದಲ್ಲಿ ಧರಿಸಬೇಕು ಮತ್ತು ಬೆಳ್ಳಿಯ ಆಭರಣಗಳನ್ನು ಸೊಂಟದಿಂದ ಕೆಳಗೆ ಧರಿಸಬೇಕು. ಕಾರಣ ಇಷ್ಟೆ : ಆಭರಣ ಸೌಂದರ್ಯವರ್ಧಕ. ಅದರಲ್ಲೂ ಚಿನ್ನವು ಶ್ರೇಷ್ಠವಾದ ಲೋಹ; ಕುಸುರಿ ಕೆಲಸಕ್ಕೆ ಅವಕಾಶ ಹೆಚ್ಚು ಮತ್ತು ಅದು ದುಬಾರಿಯಾದ ಲೋಹ ಕೂಡ. ಸೊಂಟದಿಂದ  ಕೆಳಗೆ ಚಿನ್ನದ ಆಭರಣ ಧರಿಸಿದರೆ ಸೌಂದರ್ಯ ಹೆಚ್ಚಾಗುವುದಿಲ್ಲ (ಅಥವಾ  ಹೆಚ್ಚಾದದ್ದು  ಯಾರಿಗೂ ಕಾಣುವುದಿಲ್ಲ!). ಒಂದು ವೇಳೆ ಬೆಲೆಬಾಳುವ ಆಭರಣ ಕಳೆದುಹೋದರೆ ನಮ್ಮ ಗಮನಕ್ಕೆ ಬರುವ ಸಂಭವ ಕಡಿಮೆ. ಅಲ್ಲದೇ 'ಶ್ರೇಷ್ಠತ್ವ' ಎಂಬುದು ಸೊಂಟದಿಂದ ಕೆಳಗೆ ಇಳಿಯಬಾರದು ಎಂಬುದು ಸಾಂಕೇತಿಕತೆ. 'ಶ್ರೇಷ್ಠತ್ವ'ಕ್ಕೆ ಉನ್ನತ ಸ್ಥಾನ ನೀಡಬೇಕು.


ಹೆಣ್ಣನ್ನು ಗಂಡು ಕಣ್ಣೆತ್ತಿ ನೋಡುವುದು ಸಭ್ಯತೆಯ ಲಕ್ಷಣವಲ್ಲ. ಆಕೆ ಸೀರೆ ಉಟ್ಟಿರುತ್ತಾಳೆ. ನಡೆಯುವಾಗ ಪಾದ ಮಾತ್ರ ಕಾಣುತ್ತದೆ. ಆಗ ಕಾಲುಬೆರಳಲ್ಲಿ ಬೆಳ್ಳಿಯ ಕಾಲುಂಗುರ ಧರಿಸಿದ್ದರೆ( ಚಿನ್ನದ ಕಾಲುಂಗುರ ಯಾರೂ ಧರಿಸುವುದಿಲ್ಲ!) ಆಕೆಗೆ ಮದುವೆಯಾಗಿದೆ ಎಂಬುದು ಸಿದ್ಧ. ಪವಿತ್ರಬೆರಳಿಗೆ ಬೆಳ್ಳಿಯ ಕಾಲುಂಗುರ ಧರಿಸುವ ಪದ್ಧತಿ ಬಂದುದು ಈ ಕಾರಣಕ್ಕೆ. ಕಾಲಿಗೆ ಬೆಳ್ಳಿಯ ಕಾಲ್ಗೆಜ್ಜೆ ತೊಡುವುದು ಸೌಂದರ್ಯವೃದ್ಧಿಯ ಒಂದು ಕಾರಣಕ್ಕಾದರೆ, ನಡೆದುಕೊಂಡು ಬರುವಾಗ ಉಂಟಾಗುವ ಕಾಲ್ಗೆಜ್ಜೆಯ ನಾದವು ಮಹಿಳೆಯ ಆಗಮನವನ್ನು ಸೂಚಿಸುತ್ತದೆ.


ಇತ್ತೀಚೆಗೆ ಕೆಲವು ತರುಣಿಯರು ಕಾಲಿಗೆ ಚಿನ್ನದ ಕಾಲ್ಗೆಜ್ಜೆ ತೊಟ್ಟುಕೊಳ್ಳುವುದನ್ನು  ಕಾಣಬಹುದು. ಕೆಲವರ ಕಾಲಿನಲ್ಲಿ ಚಿನ್ನದ ಕಾಲುಂಗುರ ಇರುವುದನ್ನೂ ಗಮನಿಸಬಹುದು. ಇದು ಸರಿಯಲ್ಲ; ಚಿನ್ನದ ಆಭರಣಗಳನ್ನು ಸೊಂಟದಿಂದ ಕೆಳಗೆ ಧರಿಸುವುದು ಶಾಸ್ತ್ರ ಸಮ್ಮತವಲ್ಲ. ಶ್ರೀಮಂತಿಕೆಯ ಅಹಮಿಕೆ, ಪ್ರದರ್ಶನ ಚಾಪಲ್ಯ, ತಿಳಿವಳಿಕೆಯ ಕೊರತೆ  ಅಥವಾ 'ಶ್ರೇಷ್ಠತ್ವವನ್ನು ಕಾಲಿನಷ್ಟು ಕೆಳಗೆ' ತಳ್ಳುವ ಮನೋಭಾವ ಅದರ ಹಿಂದೆ ಇರಬಹುದು.


ದೇವಸ್ಥಾನದ ಕಲಶವನ್ನು ಗೋಪುರದ ಬದಲು ಮೆಟ್ಟಲಿಗೆ ಯಾರಾದರೂ ಇಡುತ್ತಾರೆಯೆ?

No comments:

Post a Comment